ವಿಶ್ವಾಮಿತ್ರ: “ದಶರಥ, ರಾಮಂ ವಿಸರ್ಜಯ” (ವಾಲ್ಮೀಕಿ ರಾಮಾಯಣ ಬಾಲಕಾಂಡ 19 ನೇ ಸರ್ಗ 17 ಶ್ಲೋಕ) ವಾಲ್ಮೀಕಿಗಳ ಶ್ರೀಮದ್ರಾಮಾಯಾಣದ ಬಾಲಕಾಂಡವನ್ನು ಸಂಸ್ಕೃತದಲ್ಲೇ ಓದಿದಾಗ ಕಂಡ ಹೊಸ (ನನಗೆ) ವಸ್ತುಗಳ ಮೇಲೆ ಟಿಪ್ಪಣಿ ಬರೆದುಕೊಂಡಿದ್ದೆ.ಯಾರೂ ಕಾಣದ ವಿಷಯಗಳಲ್ಲ, ರಾಮಾಯಣದ ಮೇಲೆ ನಡೆದಷ್ಟು ವಿಮರ್ಶೆ ಬೇರೆ ಯಾವಕಾವ್ಯದ ಮೇಲೂ ನಡೆದಿರದು, ಆದರೂ ನನಗೆ ಹೊಸದಾಗಿ ಕಂಡದ್ದು ಓದುವವರಲ್ಲಿ ಕೆಲರಿಗಾದರೂ ಪ್ರಯೋಜನವಾದೀತು ಎಂಬ ಆಸೆ. ಬಾಲರಾಮನ ಬೆಳವಣಿಗೆಯಲ್ಲಿ ಕಾಣುವ ಮಹತ್ತರ ಬದಲಾವಣೆಗಳಲ್ಲಿ ಒಂದು ದಶರಥನಿಂದ ರಾಮನನ್ನು ಪ್ರತ್ಯೇಕಿಸುವ ಕಾರ್ಯ. ಶ್ರೀರಾಮ ಲೋಕಕ್ಕೆ ಅರ್ಪಿತನಾಗುವ ಮೊದಲು ದಶರಥನಿಂದ ಮುಕ್ತನಾಗಬೇಕಾಗಿತ್ತು. ವಿಶ್ವಾಮಿತ್ರರು ದಶರಥನ ಮೋಹಸಂಕಲೆಯನ್ನು ಕಡಿದು ರಾಮನನ್ನು ರಾಜನಾಗಲು ಅರ್ಹನಾಗಿಸಿದ್ದನ್ನು ದೇರಾಜೆ ಸೀತಾರಾಮಯ್ಯನವರು ತಮ್ಮ “ರಾಮರಾಜ್ಯದ ರೂವಾರಿ” ಎಂಬ ಕಾದಂಬರಿಯಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ಭೌತಿಕ ದಶರಥನಲ್ಲದೇ, ಮಾನವಸಹಜವಾಗಿ ರಾಮನ ಮನದೊಳಗಿದ್ದ ದಶರಥನೂ ಕಳಚಿದ್ದನ್ನು ಬಾಲಕಾಂಡ ಓದಿದಾಗ ಕಂಡೆ. ಅದರ ಬಗ್ಗೆ ಒಂದೆರಡು ಪ್ರಸ್ತಾಪಗಳು ಇಂತಿವೆ.
ವಿಶ್ವಾಮಿತ್ರರರ ಆಗಮನ: ದಶರಥನ ಆಸ್ಥಾನಕ್ಕೆ ಹಠಾತ್ ಆಗಮಿಸಿದ ವಿಶ್ವಾಮಿತ್ರ ಕೌಶಿಕರು “ಕಾಕಪಕ್ಷಧರಂ ಶೂರಂ, ಜ್ಯೇಷ್ಠಂ ಮೇ ದಾತುಂ ಅರ್ಹಸಿ” (ಬಾ.ಕಾಂ.19.9); “ಕಾಗೆಗರಿಯಂತಾ ಕೇಶರಾಶಿಯವನನ್ನು ಶೂರನಾದ ಹಿರಿಮಗನನ್ನು ಕೊಡು. ವೀರರೂ ಸುಶಿಕ್ಷಿತರೂ ಆದ ರಾಕ್ಷರನ್ನು ದಮನಿಸಬೇಕಿದೆ” ಎಂದು ಆಜ್ಞಾಪಿಸಿದಾಗ ದಶರಥ ಕಂಗಾಲಾಗುತ್ತಾನೆ. “ಮಾರೀಚಶ್ಚ ಸುಬಾಹುಶ್ಚ ವೀರ್ಯವಂತೌ ಸುಶಿಕ್ಷಿತೌ” (ಬಾ.ಕಾಂ.19.5) ಎನ್ನುವಾಗ ಶತ್ರುಗಳ ಶಕ್ತಿಯನ್ನು ಮರೆಮಾಚದೇ ಹೇಳಿದರು ಕೌಶಿಕರು. ರಾಮನನ್ನು ಕೊಡಲಾರದೇ ಹಲುಬುವ ದಶರಥನನ್ನು ನಾನಾ ರೀತಿಯಲ್ಲಿ ಮಂಕಡಿಸಿ ಕೊನೆಗೆ ಪ್ರಬಲವಾದ ಕೋಪವನ್ನು ನಟಿಸಿ ದಶರಥನಿಗೆ ಅವನ ಪೂರ್ವಜರ ಮೂಲಕ ತನ್ನ ಕರ್ತವ್ಯವನ್ನು ನೆನಪಿಸುತ್ತಾರೆ “ಮಿಥ್ಯಾಪ್ರತಿಜ್ಞಃ ಕಾಕುತ್ಸ್ಥ,ಸುಖೀಭವ ಸಬಾಂಧವಃ”(ಬಾ.ಕಾಂ.21.3); ಕಾಕುತ್ಸ್ಥ ವಂಶಜನಾಗಿ ಮಾತು ತಪ್ಪಿದರೆ ನಿನ್ನ ಬಂಧುಗಳಿಗೂ ನಿನಗೂ ಅದೆಂತು ನೆಮ್ಮದಿ? ಇದರೊಂದಿಗೆ ಕೌಶಿಕರು ಶ್ರೀರಾಮನನ್ನು ದಶರಥನ ಅಂಕೆಯಿಂದ ಬಿಡಿಸುತ್ತಾರೆ. ಒಂದು ರೀತಿಯಲ್ಲಿ ದಶರಥನಿಗೆ ಮೊದಲ ಶೋಕ ಅಂದೇ, ರಾಮ ಕಾಡಿಗೆ ಹೋದಾಗ ಮತ್ತೊಮ್ಮೆ.“ಇಷ್ಟಾಪೂರ್ತಿವಧೋ ಭೂಯಾತ್ತಸ್ಮಾತ್ ರಾಮಂ ವಿಸರ್ಜಯ” (ಬಾ.ಕಾಂ.21.8); ಕೊಟ್ಟಮಾತು ತಪ್ಪಿದವನಾಗುತ್ತೀಯೆ, ರಾಮನನ್ನು ವಸರ್ಜಿಸು. “ಯದ್ಯಭ್ಯನುಜ್ಞಾಂ ದದತೇ ತವ ಮಂತ್ರಿಣಃ ತತಃ ರಾಮಂ ವಿಸರ್ಜಯ”(ಬಾ.ಕಾಂ.19.17); ನಿನ್ನ ಮಂತ್ರಿಗಳೂ ವಸಿಷ್ಠರೂ ಅನುಮೋದಿಸಿದ್ದಾರಲ್ಲ, ರಾಮನನ್ನು ವಿಸರ್ಜಿಸು. ಇತ್ಯಾದಿ ಹಲವು ಸಲ ರಾಮನನ್ನು “ವಿಸರ್ಜಿಸಲು” ಹೇಳುತ್ತಾರೆ. ವಿಸರ್ಜನೆ ಪದಕ್ಕೆ ದಾನಕೊಡು,ಕಳುಹಿಸಿಕೊಡು ಇತ್ಯಾದಿ ಅರ್ಥಗಳಿವೆ, ಅವು ಇಲ್ಲಿ ಸೂಕ್ತವೂ ಹೌದು, ಆದರೆ ಪರಿತ್ಯಾಗ ಎಂಬ ಅರ್ಥವೂ ಇದೆ. ಕೌಶಿಕರ ಇಚ್ಛೆ ರಾಮನು ತನ್ನ ಮುಂದಿನ ಬೆೆಳವಣಿಗೆಗಾಗಿ ದಶರಥನನ್ನು ಮೀರಿ ಬೆಳೆಯಬೇಕೆಂಬುದೇ ಇರಬೇಕು.
“ಮೂರ್ಧ್ನೀಮುಪಾಗ್ರಾಹ್ಯ ಕುಶಿಕಪುತ್ರಾಯ ದದೌ” (ಬಾ.ಕಾಂ.22.3): ಕೊನೆಗೂ ಒಪ್ಪಿದ ದಶರಥ ರಾಮನನ್ನು ನೆತ್ತಿ ಮೂಸಿ ಕೌಶಿಕರಿಗೆ ಕೊಡುತ್ತಾನೆ. ಮಗು ಹುಟ್ಟಿದಾಗ ಅದರ ನೆತ್ತಿ ಮೂಸಿ ಅದರ ಕಿವಿಯಲ್ಲಿ ಜನ್ಮನಕ್ಷತ್ರವನ್ನು ಹೇಳಬೇಕಂತೆ. ನೆತ್ತಿ ಮೂಸುವುದೂ ಮಗುವನ್ನು ತನ್ನದೆನ್ನುವುದೂ ಒಂದೇ.ಇಲ್ಲಿ ದಶರಥ ರಾಮನ ವಿಕಾಸಕ್ಕಾಗಿ ನೆತ್ತಿ ಮೂಸಿ ವಿಸರ್ಜಿಸುತ್ತಿದ್ದಾನೆ. ಬಾಲಕಾಂಡದ 22ನೇ ಸರ್ಗದಲ್ಲಿ ಬರುವ ಪ್ರಸಂಗವಿದು. ನೆತ್ತಿ ಮೂಸುವ ಪರಿಪಾಠವನ್ನು ಬಾಲಕಾಂಡದಲ್ಲಿ ಹಲವೆೆಡೆ ಕಾಣುತ್ತೇವೆ. ಕೌಶಿಕರು ರಾಮನನ್ನು ಕೂಡಲೇ ತಮ್ಮ ಮಡಿಲೊಳಗೆ ತೆಗೆದುಕೊಂಡರೇ? ಇಲ್ಲ!
ರಾಮನ ಮನಸ್ಸಿನಲ್ಲಿನ್ನೂ ದಶರಥನ ಪಾಠಗಳು ನಡೆದೇ ಇದ್ದವು. ಪಿತೃವಾಕ್ಯಪರಿಪಾಲನೆಗಾಗಿ ವಿಶ್ವಾಮಿತ್ರರ ಆಜ್ಞೆಯಂತೆ ನಡೆಯುತ್ತೇನೇ, ಅದಕ್ಕಾಗಿ ತಾಟಕಿಯನ್ನು ವಧಿಸುವುದಾಗಿ ರಾಮನೆನ್ನುತ್ತಾನೆ. “ಪಿತುರ್ವಚನನಿರ್ದೇಶಾತ್ ಪಿತುರ್ವಚನಗೌರವಾತ, ವಚನಂ ಕೌಶಿಕಸ್ಯೇತಿ ಅವಿಶಂಕಯಾ ಕರಿಷ್ಯಾಮಿ ತಾಟಕಾವಧಂ” (ಬಾ.ಕಾಂ.24.2). ಆದರೂ ತಾಟಕಿ ಇದಿರಾದಾಗ ಮಾತ್ರ “ನಹಿ ಏನಂ ಹಂತುಂ ಉತ್ಸಹೇ, ಸ್ತ್ರೀ ಸ್ವಭಾವೇನ ರಕ್ಷಿತಾಂ” (ಬಾ.ಕಾಂ.26.12) ಎಂದು ಸೀದಾ ಕೊಲ್ಲದೇ ಅವಳ ಪರಾಕ್ರಮವನ್ನು ಮಾತ್ರ ಮುಗಿಸುತ್ತೇನೇ ಎನ್ನುತ್ತಾನೆ. ಮುಂದಿರುವ ವೈರಿಯೂ ವೈರಿಯಿಂದಾಗುವ ಕ್ಲೇಶವನ್ನು ತಡೆಯಲು ಮಾಡಲೇಬೇಕಾದ ಸಂಹಾರದ ಧರ್ಮಸೂಕ್ಷ್ಮವಿನ್ನೂ ಹೊಳೆದಿಲ್ಲ, ತನ್ನ ತಂದೆಯಿಂದಲೂ, ಗುರುಗಳಿಂದಲೂ ಕಲಿತ ಅಸೂಕ್ಷ್ಮವಾದ, ಬಹುಶಃ ಪುಸ್ತಕಜ್ಞಾನದಲ್ಲೇ ಇನ್ನೂ ತೊಡಗಿದಂತಿದೆ. ರಾಮ ಇಲ್ಲಿಯವರೆಗೆ ಕಲಿತದ್ದು ಪುಸ್ತಕದ ವಿದ್ಯೆ, ಹೇಳಿಕೊಟ್ಟ ಮಾತು. ಅನುಭವದಿಂದ ಕಲಿಯುವುದು ಇದೇ ಮೊದಲು. ವಿಶ್ವಾಮಿತ್ರರು ಹಲವು ಸಲ “ಸ್ತ್ರೀ ಎಂದು ನೋಡದಿರು” ಎಂದು ಹೇಳಿದರೂ ಕೈಗಳನ್ನು ಮಾತ್ರ ತರಿಯುತ್ತಾನೇ “ಶರವರ್ಷೇಣ ಕರೌ ಚಿಚ್ಛೇದ” (ಬಾ.ಕಾಂ.26.17). ತದನಂತರವೂ ತಾಟಕಿ ನಿಲ್ಲದಿದ್ದಾಗ ವಿಶ್ವಾಮಿತ್ರರ “ಅಧರ್ಮ ನಿರತಾಃ ನಾರ್ಯಾಃ ಹತಾಃ ಪುರುಷಸತ್ತಮೈಃ” (ಬಾ.ಕಾಂ.25.22) ಎಂಬ ಧರ್ಮಸೂಕ್ಷ್ಮವನ್ನೊಪ್ಪಿ ತಾಟಕಾಸಂಹಾರ ಮಾಡುತ್ತಾನೆ. ನನಗನ್ನಿಸುವಂತೆ ಇಲ್ಲಿ ರಾಮನೊಳಗಿನ ದಶರಥನ ಮಿತಿಗಳು ಹರಿದು ಅವನು ಸಂಪೂರ್ಣ ಧರ್ಮಜ್ಞರಾಜನಾಗುವ ಅಧಿಕಾರ ಪಡೆಯುತ್ತಾನೆ.ತಾಟಕಾ ಸಂಹಾರ ರಾಮನಿಗೆ ಪರೀಕ್ಷೆಯೂ ಪಾಠವೂ ಆಗಿತ್ತು.
ಈ ರೀತಿಯಲ್ಲಿ ಬೆಳೆದು ಉತ್ತೀರ್ಣನಾದ ಬಾಲರಾಮನ ನೆತ್ತಿಯನ್ನು ವಿಶ್ವಾಮಿತ್ರರು ಈಗ ಮೂಸುತ್ತಾರೆ “ಮೂರ್ಧ್ನಿ ರಾಮಮುಪಾಘ್ರಾಹ್ಯ ಇದಂ ವಚನಮಬ್ರವಿತ್”, (ಬಾ.ಕಾಂ.26.33) 22 ನೇ ಸರ್ಗದಲ್ಲಿ ದಶರಥ ನೆತ್ತಿ ಮೂಸಿ ವಿಸರ್ಜಿಸಿದ್ದನ್ನು 26ನೇ ಸರ್ಗದಲ್ಲಿ ಕೌಶಿಕರು ಮತ್ತೆ ನೆತ್ತಿ ಮೂಸಿ ಎತ್ತಿಕೊಂಡರು. ಒಂದು ದೊಡ್ಡ ಯುದ್ಧವೆಂಬ ಪರೀಕ್ಷೆಯ ನಂತರ ವಿಶ್ವಾಮಿತ್ರರು ರಾಮನನ್ನು ತಮ್ಮವನನ್ನಾಗಿಸಿಕೊಂಡರು. ತಮ್ಮ ಎಲ್ಲಾ ವಿದ್ಯೇಗಳನ್ನೂ ರಾಮನಿಗೆ ಧಾರೆಯೆರೆದು ಕೊಟ್ಟರು.ಹಾಗೆಂದು ರಾಮನಲ್ಲಿ ಒಮ್ಮೆಲೇ ಎಲ್ಲಾ ಗುಣಗಳೂ ಮೇಳೈಸಿದವೆಂದಲ್ಲ. ವಿಶ್ವಾಮಿತ್ರರಿಂದ ಉಪದೇಶಿತನಾದ ಮೇಲೂ ರಾಕ್ಷಸರ ಸಂಹಾರದಿಂದ ಹಿಂಜರಿಯುತ್ತಾನೆ. ಇದರಲ್ಲಿ ನಾವು ರಾಮನೊಳಗಿನ ಧರ್ಮಪ್ರಜ್ಞೆಯ ನಿರಂತರ ಬೆಳವಣಿಗೆಯನ್ನು ಕಂಡರೆ ನಮಗೇ ಲಾಭ. 30ನೇ ಸರ್ಗದಲ್ಲಿ “ನ ಉತ್ಸಹೇ ಹಂತುಂ ಇದೃಶಾನ್ ರಾಕ್ಷಸಾನ್” ಎಂದು ಮಾರೀಚನನ್ನು ಕೊಲ್ಲದೇ ಬಿಟ್ಟದ್ದು ಮುಂದೆ ದೊಡ್ಡ ರಾಮಾಯಣಕ್ಕೆ ಕಾರಣವಾಗುತ್ತದೆ.
ಬಾಲಕಾಂಡದಲ್ಲಿ ರಾಮನ ಸರ್ವತೋಮುಖ ಬೆಳವಣಿಗೆ ಕಾಣುತ್ತದೆ.ಬಾಲಕನಿಂದ ಪುರುಷ, ಪುರುಷೋತ್ತನಮನಾಗುವ ದಾರಿಯೂ ಕಾಣುತ್ತದೆ. ತಂದೆ ತಾಯಿ ಗುರು ಗ್ರಂಥಗಳಿಂದ ಕಲಿತದ್ದಕ್ಕೂ ಅನುಭವದಿಂದ ಕಳಿತ ಅಂತರ್ಬೋಧೆಗೂ ಇರುವ ವ್ಯತ್ಯಾಸ ಕಾಣುತ್ತೇವೆ.ಶ್ರೀರಾಮ ಶ್ರೀಹರಿಯ ಅವತಾರವೆಂದು ತೋರಿಸಲು ಬಾಲಕಾಂಡದಲ್ಲಿ 3 ಸರ್ಗಗಳೇ ಇವೆ (15,16,17), ಅವುಗಳ ಹೊರಗೆ ರಾಮ ಮಾನವನಾಗಿ ಚಿತ್ರಿತನಾಗಿದ್ದಾನೆ. ಮಾನವನಾಗಿ ಶ್ರಿರಾಮ ಬೆಳೆಯಲು ಮಾನವಸಹಜ ಭೌತಿಕ ಮಾನಸಿಕ ಸಂಕಲೆಗಳನ್ನು ಹರಿಯಲೇ ಬೇಕು. ಹರಿಯೇ ಹರಿದಿದ್ದಾನೆ.
ವಿದ್ವಾನ್ ಮಹಾಮಹೋಪಾಧ್ಯಾಯ ಎನ್ ರಂಗನಾಥಶರ್ಮರ ಕನ್ನಡಾನುವಾದ ಸಹಿತ ಶ್ರೀಮದ್ವಾಲ್ಮೀಕಿ ರಾಮಾಯಣಂ ಪುಸ್ತಕಗಳನ್ನು ಆಧರಿಸಿದ್ದೇನೆ. ಕನ್ನಡಲಿಪಿಯಲ್ಲಿ ಕನ್ನಡಸರಳಾನುವಾದದೊಂದಿಗೆ ಸಂಸ್ಕೃತಮೂಲವನ್ನು ಓದಬಹುದು. ಪುಸ್ತಕಗಳು vidwannrs.in ನಲ್ಲಿ ಸಿಗುತ್ತವೆ.
ಗಣೇಶಕೃಷ್ಣ ಶಂಕರತೋಟ
ಜನವರಿ ೨೦೨೪
೨೦೨೪ರ ಹವ್ಯಸಿರಿಯಲ್ಲಿ ಪ್ರಕಟವಾದುದು
I tweet @ganeshkrishna

This work is licensed under a Creative Commons Attribution-NonCommercial-NoDerivatives 4.0 International License.
Quote this blog with author name and link. ex: “ಶ್ರಿರಾಮ ಲೋಕಾರ್ಪಣೆ by ಗಣೇಶಕೃಷ್ಣ ಶಂಕರತೋಟ, manjati.net/shrirama/“